ಶುಕ್ರವಾರ, ಮೇ 6, 2011

ಸ್ವ'ಗತಕಾಲ'

 
ಬಾಗಿಲೊಳು ಕೈ ಮುಗಿದು...

ನಮಸ್ಕಾರ.
ನನ್ನ ಹೆಸರು ಅಕ್ಷರ ಲೋಕ. ನನ್ ಹುಟ್ಟೂರು ರಾವಂದೂರು. ಇದಿರೋದು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಲ್ಲಿ. ಹೋಬಳಿ ಕೇಂದ್ರ. ವಿಶಾಲ ಮೈದಾನದ ಹಸಿರು ಚಪ್ಪರಗಳಡಿಯಲ್ಲಿ ಕಳೆದ ಆರು ದಶಕಗಳಿಂದ ಇಲ್ಲಿದ್ದೀನಿ. 1953 ನನ್ನ  ಜನ್ಮವರ್ಷ. ಅಂದಿನಿಂದ ಇಂದಿನವರೆಗೆ ಅದೆಷ್ಟು ಜನ ಶಿಷ್ಯಂದಿರು ? ಅದೆಷ್ಟು ಜನ ಗುರುವರ್ಯರು ? ಅದೆಷ್ಟು ಹಿತೈಷಿಗಳು ? ಅದೆಷ್ಟು ಜನ ಸ್ನೇಹಿತರು ? ಸಹೃದಯಿಗಳು ! ನನ್ನ ಹಿತಕಾಯ್ದಿದ್ದಾರೆ. ನನಗೆ ಕೀರ್ತಿ ಕಿರೀಟ ತೊಡಿಸಿದ್ದಾರೆ. ಅವರಿಗೆಲ್ಲಾ ಕೃತಜ್ಞತೆ ಹೇಳಲೇಬೇಕೆನ್ನಿಸಿದೆ. ಅದಕ್ಕಾಗಿ ಈ ರೂಪ. ಸ್ನೇಹಿತರೇ ನಿಮಗೆಲ್ಲಾ ನನ್ನ ಎದೆತುಂಬಿದ ನಮಸ್ಕಾರ.

ಸ್ಕೂಲ್ ಮುಖಿ
 ನಿಮ್ಗೆಲ್ಲಾ ಗೊತ್ತಾಗಿದೆ, ನನ್ನ ಹೆಸರು ಅಕ್ಷರಲೋಕ ಅಂತ.ನನ್ನದು ಅಕ್ಕರೆ ಅಂಗಳ. ಪ್ರೀತಿಯ ಪರಿಪಾಠ ನನ್ನದು. ಇದಕ್ಕೆ ಸಾಕ್ಷಿ ಕಳೆದ 1960-70ರ ದಶಕದ ಸವಿನೆನಪುಗಳು. ಅಂದು ಓದಿರಲಿ, ಕುಣಿತವಿರಲಿ, ಆಟವಿರಲಿ, ನೋಟವಿರಲಿ,... ಎಲ್ಲದರಲ್ಲೂ ನಾನೇ ಮೊದಲು. ``ರಾವಂದೂರು ಹೈಸ್ಕೂಲು'' ಅಂದ್ರೆ ಸಿಕ್ಕಾಪಟ್ಟೆ ಫೇಮಸ್ಸು. ಜಿಲ್ಲೆಯಲ್ಲೇ ಒಳ್ಳೆ ಹೆಸರಿತ್ತು. ಅಂದರೆ ಈಗ ಇಲ್ಲವೆಂದಲ್ಲ. ಇದೆ. ಆದರೆ ಅಷ್ಟಿಲ್ಲ. ಕಾಲಗರ್ಭದೊಳಗೆ ವಿಲವಿಲ ಅನ್ನುತ್ತಿದೆ. ಏಕೆಂದ್ರೆ, ನನಗೂ ವಯಸ್ಸಾಗಿದೆ(58). ಹಲ್ಲು ಉದುರಿವೆ(ಕೊಠಡಿಗೋಡೆ ಬಿರುಕು). ಮೈ ಸುಕ್ಕುಗಟ್ಟಿದೆ(ಆರ್ಸಿಸಿ ಕುಸಿತ). ಕಣ್ಣು ಮಂಜಾಗಿದೆ(ದಾಖಲೆಗಳಿಗೆ ಗೆದ್ದಲು). ನೋಟ ಕಳೆಗುಂದಿದೆ( ದುರಸ್ತಿಗೆ ಹಾತೊರೆ). ಈಗೆನಗೆ ವೃದ್ಧಾಪ್ಯಕಾಲ. ಆದರೇನು ?


ಹೈಕ್ಲಾಸ್ ಹಜಾರ
 ನನ್ನ ಕುಟುಂಬ ದೊಡ್ಡದು. ಈಗದಕೆ ಹೊಸ ಯಜಮಾನನ ಆಗಮನ. ಇನ್ನೂ ತರುಣ ಆತ. ಅವನಿಗೆ ಸಾಧಿಸುವ ಛಲವಿದೆ. ಛಲಕ್ಕೆ ತಕ್ಕ ಮನಸೂ ಇದೆ. ಒಳ್ಳೆ ಮನಸಿಗೆ  ಒಳ್ಳೆ ಮನುಷ್ಯರ ಬೆಂಬಲವೂ ಇದೆ. ಈ ಬೆಂಬಲವೇ ನನಗೆ ಬೆನ್ನೆಲುಬು. ಗತಿಸಿಹೋದ ಸುವರ್ಣಕಾಲ ಮತ್ತೆ ಬರುವ ಆಶಾಭಾವ. ಈ ಭವದ ಭಾವಕ್ಕೆ ನನ್ನ ಸ್ನೇಹಿತರು ನೀವು ಜೀವ ತುಂಬಿ. ನನ್ನ ಶಿಷ್ಯೋತ್ತಮರನೇಕರಿದ್ದೀರಿ. ನನ್ನ ಕಡೆಗೊಮ್ಮೆ ನೋಡಿ. ನೀವು ಈ ಹಿರಿಯಜ್ಜನ ಕೈ ಹಿಡಿಯಿರಿ. ಸಂಜೆಗಣ್ಣ  ಹಿನ್ನೋಟಕೆ ಮುನ್ನುಡಿ ಬರೆವವರು ನೀವಲ್ಲವೇ ? ನಿಮ್ಮಲ್ಲಿ  ಆ ಶಕ್ತಿ ಇದೆ. ಅದು ವ್ಯರ್ಥವಾಗದಿರಲಿ. ಕಡೆಗಣ್ಣ ಕುಡಿನೋಟ ನಿಮ್ಮಜ್ಜ ಮೇಷ್ಟ್ರಿನ ಮೇಲಿರಲಿ.  


ಕಾಲವಾವನ ಕೀಳುಮಾಡದು

ನಾನೊಂದು ಸ್ಥಾವರ.
ನನಗೆ ಜಂಗಮರೂಪ.
ಜಗದಜಂಗಮಿಗೊಬ್ಬ ಸಾರಥಿ.
ಸಾರಥಿಗೆ ಸಾರ್ಥಕ ಸುಪುತ್ರರು.
ಪುತ್ರರತ್ನಗಳಿಗೆ ಹತ್ತಾರು ಭಂಟರು.
ಅವರೂ ನನ್ನ ನಂಟರು.
ಇದು ಅಂಟಿದ ನಂಟು.
ಈ ನಂಟಿನ ಕೊನೆ ಬಲ್ಲವರಾರು ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ